Tuesday, 28 February 2017

ನಾಯಿ ಮುಟ್ಟದ ರೊಟ್ಟಿ

ತಿಂಡಿ ಬೇಡಿದೆ ಹಸಿದು
ಅವರು ಕಣ್ಣೆತ್ತಿಯೂ
ನೋಡಲಿಲ್ಲ

ರಾತ್ರಿ ಉಳಿದದ್ದ ಎಸೆದು
ಹೇಳಿದ್ದು ಈಗಲೂ ನೆನಪಿದೆ
ಬದುಕಿಕೊ ತಿಂದು !

ಅದೇನು ತಡೆಯಿತೋ
ಹಸಿವಿನ ನಡುವೆಯೂ
ಒಲ್ಲೆ ಎಂದೆ !

ಎಸೆದ ರೊಟ್ಟಿಯ ಮೇಲೆ
ಮಣ್ಣ ತೂರಿ ಸಾಯಿ
ಬಾಂಚದ್ ಎಂದುಬಿಟ್ಟರು!

ಬದುಕು
ನಾಯಿಮುಟ್ಟದ ರೊಟ್ಟಿ
ಅನ್ನಿಸಿದ್ದೇ ಆವಾಗ!


Monday, 27 February 2017

ನನ್ನವಳು

ಹಾಳು ಸುರಿದ
ಮನೆ ಮನವ
ಒಪ್ಪಮಾಡಿದವಳು !

ಕಂಡ ಕಂಡಲ್ಲೆಲ್ಲಾ
ಹುಚ್ಚೆದ್ದು ಓಡಿದ್ದ
ಕುದುರೆಯ ಲಗಾಮ
ಹಿಡಿದವಳು !

ನನಗಾಗಿ ನನ್ನೊಡನೆಯೇ
ಸದಾ ಸಿಡಿಮಿಡಿ
ಗೊಂಡವಳು !

ನನ್ನದನ್ನೆಲ್ಲಾ ತನ್ನ
ಗರ್ಭದಲ್ಲಿಯೆ
ಅಡಗಿಸಿಕೊಂಡವಳು !

ಕಡೆಗಣಿಸಿ ಕಲಿಸಿದವಳು
ಉಣಿಸಿ ರಮಿಸಿದವಳು
ನನ್ನವಳು !

ಕ್ರಾಂತಿ

ಮನಸ್ಸು ಉರಿವಾಗ
ಹುಟ್ಟಿದ ಕಿಡಿ
ಆರದೆ ಯಾರನೂ ಸುಡದೆ
' ಕಾವ ' ಹಸ್ತಾಂತರಿಸಿದರೆ
ಅದೇ ಕ್ರಾಂತಿ !

ಧ್ವನಿ ಮತ್ತು ಪ್ರಜ್ಞೆ

ಒಬ್ಬನದ್ದು ಎಂದಿಗೂ
ಧ್ವನಿಯಾಗುವುದಿಲ್ಲ
ಅದಕ್ಕೆ ಹಲವಾರು
ದನಿಗಳು ಕೂಡಬೇಕು

ಒಬ್ಬನ ಪ್ರಜ್ಞೆಯೇ
ಸಾಕ್ಷಿ ಪ್ರಜ್ಞೆಯಲ್ಲ
ಅಲ್ಲಿ ಬಿನ್ನ ವಿಚಾರಗಳ
ವೈರುಧ್ಯ ಇರಲೇಬೇಕು !

ಪ್ರೀತಿ

ಯಾವಾಗಲೂ ಹೀಗೆಯೇ
ನಾನೆಲ್ಲೋ ನೋಡುವಾಗ
ಅವಳು ನನ್ನ
ಅವಳೆಲ್ಲೋ ನೋಡುವಾಗ
ನಾನವಳ ನೋಡುತ್ತಾ
ಹೇಳಲಾಗದೆ ಪರಿತಪಿಸುವುದು
ಮತ್ತು ಹೀಗೆಯೇ ಕದ್ದುಮುಚ್ಚಿ
ಪ್ರೀತಿಯ ಅನುಭವಿಸುವುದು  !

ಶಿವರಾತ್ರಿ

ಶಬ್ಧ ಶಿವ
ಅರ್ಥ ಪಾರ್ವತಿ
ಶಬ್ಧಾರ್ಥ ಶಿವರಾತ್ರಿ !

Wednesday, 22 February 2017

ಕಾಡ ಮಕ್ಕಳು


ಗುಬ್ಬಿಗಳ ಒಕ್ಕಲೆಬ್ಬಿಸಿದರು
ಮರಗಳ ಕಡಿದು
ಅವು ಎಲ್ಲಿ ಹೋದವೋ
ಬದುಕ ಹುಡುಕಿ ?

ತಿಳಿ ನೀರಿಗೆ ಕೊಳಚೆಯ
ಬೆರೆಸಿ , ಕುಡಿವರು
ಅದನೇ ಮಗ್ಗಲಿನಿಂದ
ಬೋರುಗಳನಿಳಿಸಿ !

ಬದುಕುತಿಹರು
ತಾವೇ ನಿರ್ಮಿಸಿದ
ಹೊಗೆಯ ಜಗದೊಳು
ಕಂಡರೂ ಕಾಣದಂತೆ
ಮೀಸೆ ಮಣ್ಣಾಗದಂತೆ

ರಸ್ತೆಯಗಲಿಸಲಿಕ್ಕೆ
ಮರಕಡಿವವರು
ಕಟ್ಟಿಗೆಗೆ ಪುಳ್ಳೆ ಆಯುವವನ
ಕುಂಡೆಗೆ ಹೂಡೆವರು
ಇದಾವ ಸೀಮೆಯ ನ್ಯಾಯ ?

ಕೇಳಿ ತಮಾಷೆ
ಕಾಡತಬ್ಬಿದವರ
ಎಳೆದು ತರುತ್ತಾರಂತೆ
ಹೊಸ ಜಮೀನು
ಮನೆ ಕೊಡಿಸುತ್ತಾರಂತೆ
ಎಂಥ ಹತಾಷೆ !

ನಗುವಿಗೂ ನೆರಳಿಗೂ
ಬೆಲೆಕಟ್ಟುವವರು ಇವರು
ಇವರ ಜ್ಞಾನಕ್ಕೆ ತರ್ಕಕ್ಕೆ ತೆವಲಿಗೆ
ಬಲಿಯಾಗುತಿಹರು
" ಕಾಡ ಮಕ್ಕಳು "

Friday, 17 February 2017

ವಲಸಿಗನಾರು ???


ನೀನು ಈ ಊರಿಗೆ ಬ೦ದಾಗ
ನಿನ್ನನ್ನ 'ವಲಸಿಗ' ಅ೦ದರು
ನೀನು ಕೇಳಿ ಸುಮ್ಮನೆ ಮರುಗಿದ್ದೆ
ನಿನ್ನೂರ ನೆನೆದು ಕೊರಗಿದ್ದೆ !

ಕಾಲ ಉರುಳಲು ಬೇಗ
ಮೊನ್ನೆ ಬ೦ದವನನ್ನು ನೀನೂ
ಸ೦ಭೋದಿಸುವುದು ಹಾಗೆಯೇ
ಅಲ್ಲವೆ ಈಗ ?

ನಿನ್ನ ಮಗನೀಗ
ನಿನ್ನನ್ನು ಊರನ್ನು
ಎರಡನೂ ಬಿಡಲು
ತುದಿಗಾಲಲ್ಲಿ ನಿ೦ತಿರುವಾಗ
ಆ ಊರಲ್ಲಿ ಅವನನ್ನು
ಏನೆನ್ನುವರು ಹೇಳು ಬೇಗ ???
ಹಲವರು ತಮ್ಮ ಭುಜವನ್ನು
ತಾವೇ ತಟ್ಟಿಕೊಳ್ಳುತ್ತಾರೆ ತಪ್ಪಿಲ್ಲ
ಅದಕ್ಕೆ ನಾನು ನನ್ನ post ಅನ್ನು
ನಾನೇ Like ಮಾಡಿಕೊಳ್ಳುತ್ತೇನೆ 

ನಾ ಬರೆವುದು

ನಾ ಬರೆವುದು
ಅದಕ್ಕೂ
ಇದಕ್ಕೂ
ಮತ್ತೆದಕ್ಕೊ ಅಲ್ಲ
ಸುಮ್ಮನಿರಲಾರದ್ದಕ್ಕೆ
ಏನೂ
ಮಾಡಲಾರದ್ದಕ್ಕೆ !
ನನ್ಮ ಅವಳ
ಪ್ರೀತಿ ಅಲ್ಪಾಯು
ನೆನಪುಗಳೊ
ಪಾಪಿ ಚಿರಾಯು !

ಅಸ್ಥಿತ್ವ


ಎಲ್ಲದರ ಮೇಲೂ ಹೆಸರು
ಬರೆವ ಖಯಾಲಿ ನನಗೆ.
ಕಟ್ಟಿದ ಮನೆಯ ಮೇಲೆ....
ಕೊಂಡ ಕಾದಂಬರಿಯ ಮೇಲೆ...
ಕಡಲ ತಡಿಯ ಮರಳ ಮೇಲೆ....

ಉಳಿಯದು ಎಲ್ಲೂ ಶಾಶ್ವತವಾಗಿ
ನನ್ನ ಹೆಸರು ಎಂದು ತಿಳಿದರೂ
ಮತ್ತೆ ಮತ್ತೆ ಬರೆವುದು
ನಾನೇ ಬರೆದ ನನ್ನ ಹೆಸರನ್ನು
ನೋಡಿ  ನೋಡಿ ಸಂಭ್ರಮಿಸಲು

ಮತ್ತು

ನಿಮಗೆ ನನ್ನ ಇರುವಿಕೆಯನ್ನು
ಮತ್ತೆ ಮತ್ತೆ ನೆನೆಪಿಸಲು !