Sunday, 15 November 2015

ಯಾರನ್ನಾಳುತ್ತೀರಿ .....ನೀವುಗಳೇ ???

ಕೊಡಗಿನವರನ್ನು ಕೆಣಕಿ
ಅವರು ಪ್ರತ್ಯೇಕತೆಯ ಮಾತಾಡುತ್ತಾರೆ !
ಕರಾವಳಿಯವರನ್ನು ಕಡೆಗಾಣಿಸಿ
ಆವರೂ ಅದನೇ ಮಾಡುತ್ತಾರೆ !
ಕರ್ಣಾಟಕ ಏಕೀಕರಣದ ಮಹತ್ವದ
ಪಾಲು ಉತ್ತರ ಕರ್ಣಾಟಕ ದವರದ್ದು
ಅವರನ್ನೂ ಕೆಣುಕಿ ಬರೀ ಬೆ೦ಗಳೂರು
ಮೈಸೂರನ್ನಾಳುತ್ತೀರಾ ???

Thursday, 12 November 2015

ಹಾರಾಡುವ ಹಾಡುಗಳು

ಬಹುಷಃ ೨೦೦೩ನೇ  ಇಸವಿ ಇರಬೇಕು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕ್ಯಾಮೆರಾ 
ಕಣ್ಣಿಗೆ ಸೆರೆ ಸಿಕ್ಕ ಹಕ್ಕಿಗಳ ಚಿತ್ರಪ್ರದರ್ಶನ, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಇರುವುದರ ಜಾಹೀರಾತು ಪ್ರಕಟವಾಗಿತ್ತು . ತೇಜಸ್ವಿಯವರು ನಮಗೆ ಬರಹಗಾರರಾಗಿ ತುಂಬಾಚೆನ್ನಾಗಿ ಆಗಲೇ ಗೊತ್ತಿದ್ದರು. ಹೈ ಸ್ಚೂಲಿನಲ್ಲಿ ಅವರ "ಸುಸ್ಮಿತಾ ಮತ್ತು ಹಕ್ಕಿಮರಿ" ಪಾಠ ವಿತ್ತು , ನಮಲ್ಲಿ ಕೆಲವರು ಅಷ್ಟುಹೊತ್ತಿಗೆ ಆವರ ಪರಿಸರದ ಕಥೆ , ಕರ್ವಲ್ಹೋ , ಚಿದಂಬರ ರಹಸ್ಯ ಮುಂತಾದ ಕೃತಿ ಗಳನ್ನೂ ಓದಿದ್ದೆವು. ಇಷ್ಟೆಲ್ಲಾ ಇದ್ದರೂ ಒಬ್ಬ ಅನೂಹ್ಯ ಛಾಯಾಗ್ರಹಕರಾಗಿ ಅವರ ಬಗ್ಗೆ ಕೇಳಿದ್ದು ಮಾತ್ರ , ಅವರನ್ನು ನೋಡುವ ಅವಕಾಶ ಒದಗಿಬಂದಿರಲಿಲ್ಲವಾದ್ದರಿಂದ ತಡಮಾಡದೆ ಅಂದಿನ ಸಂಜೆಯೇ ಕಲಾಪರಿಷತ್ತಿಗೆ ಹೋಗುವ ನಿರ್ಣಯ ಮಾಡಿದೆವು.
ನಮ್ಮ ಕಾಲೇಜು ಕೆಂಗೇರಿಯ ಬಳಿ ಇದ್ದುದ್ದರಿಂದ ಎರೆಡೆರಡು ಬಸ್ಸುಹಿಡಿದು ಹೋಗಬೇಕಿತ್ತು. ಮೊದಲು ಮೆಜೆಸ್ಟಿಕ್ ಗೆ ನಂತರ  ಅಲ್ಲಿಂದ ಚಿತ್ರಕಲಾ ಪರಿಷತ್ತಿಗೆ ಬಂದಿಳಿದಾಗ ಕೆಲವು ಸರ್ಕಾರಿ ವಾಹನಗಳು ಹೊರಗಡೆ ಕಂಡವು . ಹೊರಬಾಗಿಲಿನಲ್ಲಿ ಗದ್ದಬಿಟ್ಟವರೊಬ್ಬರು ಖಾದಿಹಾಕಿದ್ದ ಮತ್ತೊಬ್ಬರ ಜೊತೆಯಲ್ಲಿ ಮಾತಿನಲ್ಲಿದ್ದರು, ನಾನು ವಯೋಸಹಜ ಕದ್ದಾಲಿಕೆ ಮಾಡಿದ್ದರಿಂದ  ಅವರ ಮಾತು ಗಂಬೀರವಾಗಿತ್ತು ಅನ್ನಿಸಿತು ! ಆಮೇಲೆ ತಿಳಿದದ್ದು ಗಡ್ಡ ಬಿಟ್ಟವರು ಆಗಿನ ಪರಿಷತ್ತಿನ ಅದ್ಯಕ್ಷರಾದ ಡಿ ಕೆ ಚೌಟ ರು ಮತ್ತು ಜುಬ್ಬದಲ್ಲಿದ್ದ ರಾಜಕಾರಣಿ ಚಿಕ್ಕಮಗಳೂರಿನ ಬಿ ಎಲ್ ಶಂಕರ್ ರವರೆಂದು !
ಕೆಲವರು ಅಂದುಕೊಳ್ಳುತಿದ್ದರಂತೆ ಯಾರಕೈಗೂ ಸಿಕ್ಕದ ತೇಜಸ್ವಿಯವರು , ಬಿ ಎಲ್ ಶಂಕರ್ ಕೈಗೆ ಸುಲಭವಾಗಿ ಸಿಕ್ಕುತ್ತಾರೆ ಎಂದು ಇದಕ್ಕೆ ಅವರ ಸಜ್ಜನಿಕೆ  ಆಥವಾ ಕಲಾಸಕ್ತಿ ಕಾರಣವಿರಬಹುದು !
ಪ್ರದರ್ಶನದ ಹಾಲು ನಿಷಬ್ಧವಾಗಿತ್ತು . ಅದುನಾನು ನೋಡುತ್ತಿದ್ದ ಮೊದಲ ಚಿತ್ರಪ್ರದರ್ಶನವಾದುದರಿಂದ ಉತ್ಸಾಹಿತನಾಗಿದ್ದೆ !ಬೆಳಕಿನ ಸಂಯೋಜನೆ ತುಂಬಾ ಹಿಡಿಸಿತು. ಗೋಡೆಯಮೇಲೆ ತೇಜಸ್ವಿಯವರು ಖುದ್ದು ತೆಗೆದ ಹಕ್ಕಿಪಕ್ಷಿಗಳ ಚಿತ್ರಗಳು !
ತಾಯಿ ಹಕ್ಕಿ ಮರಿಗೆ ತುತ್ತನಿಡುವುದು, ಚಿಕ್ಕದೊಂದು ಪೊಟರೆಮೇಲೆ ಹಕ್ಕಿಯೊಂದು ಚೀರುತ್ತಿರುವುದು , ಕ್ರೇನ್ ಹಕ್ಕಿಯೊಂದು ಮೀನುಹಿಡಿದುದು, ಹೀಗೆ ಹತ್ತು ಹಲವು ಚಿತ್ರಗಳ ನಡುವೆ ನಮಗೊಂದು ಆಶ್ಚರ್ಯ ಕಾದಿತ್ತು !
ನಮಗಿಂತಾ ವಯಸ್ಸಿನಲ್ಲಿ ಒಂದೆರಡು ವರುಷಕ್ಕೆ  ಚಿಕ್ಕವನಿದ್ದ ಹುಡುಗನೊಬ್ಬ ಬಿಳಿಹಾಳೆಯ ಪುಸ್ತಕೊಂದರಲ್ಲಿ ಚಿತ್ರಗಳಲ್ಲಿದ್ದ ಪಕ್ಷಿಗಳನ್ನು ಪೆನ್ಸಿಲ್ಲಿನಲ್ಲಿ ಬಿಡಿಸುತ್ತಿದ್ದ ! ನನಗೆ ಆಶ್ಚರ್ಯವಾಗಿ "ಏಕೆ ??" ಎಂದೆ ! ಅದಕ್ಕವನು ಸಹಜವಾಗಿ ಮತ್ತು ಸಲೀಸಾಗಿ "ಹಾಬಿ" ಅಂದ ! ಆಗಿನ್ನೂ ಎಲ್ಲರಕೈಗಳಲ್ಲಿ ಮೊಬೈಲ್ ಫೋನು ಗಳು ಇರಲಿಲ್ಲ ಮತ್ತು ಒಂದುವೇಳೆ ಇದ್ದರೂ ಅದಕ್ಕೆ ಒಳಗೆ ಅವಕಾಶವಿರಲಿಲ್ಲ.  ಆಹುಡುಗ ಅದಾಗಲೇ ಐದರಿಂದ ಆರು ಪಕ್ಷಿಗಳ ಚಿತ್ರಗಳನ್ನು  ಬಿಡಿಸಿಯೂ ಹುಮ್ಮಸ್ಸಿನಲ್ಲಿದ್ದ  ! ಸ್ವಲ್ಪ ಆವನ ಬಗ್ಗೆ ವಿಚಾರಿಸಿದೆ , M E S  ವಿಜ್ಞಾನ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ಎಂದು ತಿಳಿಯಿತು ! ವಿಜ್ಞಾನ ಮತ್ತು ಚಿತ್ರಕಲೆ ಎಲ್ಲಿಯನಂಟು ? ಪ್ರೈವೇಟ್ ಟುಶನ್ ಬಿಟ್ಟು ಇಲ್ಲಿ ಏಕೆ ಬಂದೆ ಮರುಳ ಎನ್ನಬೇಕು ಆನಿಸ್ಸಿತು, ಅನ್ನಲಿಲ್ಲ !  ತೇಜಸ್ವಿಯವರೂ ಕಾಲೇಜಿನಲ್ಲಿ ವಿಜ್ಞಾನವನ್ನೇ ಆರಿಸಿಕೊಂಡಿದ್ದರೂ ನಂತರ ಕಾರಣಾ೦ತರಗಳಿಂದ B.A ನಲ್ಲಿ ಕಲೆ ಎಡೆಗೆ ವಾಲಿದ್ದರು.
ಹೀಗೇ ಎಲ್ಲ ಚಿತ್ರಗಳ್ನೂ ನೋಡಿಕೊಂಡು ಬರುವಾಗ ನನಗನ್ನಿಸಿದ್ದು ಈ ತೆರೆನಾದ ಚಿತ್ರಗಳನ್ನು ತೆಗೆಯಬೇಕಾದರೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾಗಳು ಬೇಕಾಗಬಹುದೆಂದು ! ಅದು ಆಗ ನನಗೆ ಗಗನಕುಸುಮವಾಗಿದ್ದರಿಂದ ( ಈಗೂ !!!) ಫೋಟೋಗಳನ್ನು ಆಸ್ವಾದಿಸಿ  ಫೋಟೋಗ್ರಫಿಯನ್ನು ಮನಸಲ್ಲೇ ನಿಂದಿಸಿಕೊಂಡು ಹೊರಬಂದರೆ  ಮತ್ತೊಂದು ಅಚ್ಚರಿ ಕಾದಿತ್ತು !  ಅಲ್ಲೊಂದಷ್ಟು ಜನಸೇರಿದ್ದರು, ಅವರಮಧ್ಯೆ ಇದ್ದ ಅರವತ್ತರ ಆಸುಪಾಸಿನ ವ್ಯಕ್ತಿಯೊಬ್ಬರ  ಸಂದರ್ಶನ ನಡೆಯುತ್ತಿತ್ತು. ಹತ್ತಿರವಾದಾಗ ಜನ ಅವರನ್ನು ಸಂಭೋಧಿಸುತ್ತಿದ್ದ ರೀತಿಯಿಂದ ತಿಳಿದದ್ದು  ನಮ್ಮ ತಲೆಮಾರಿನ ಯುವಕಯುವತಿಯರನ್ನು ಸಾಹಿತ್ಯದ ಓದಿಗೆ ಹಚ್ಚಿದ , ವಿಜ್ಞಾನ ವನ್ನು ಇಂಟರೆಸ್ಟಿಂಗ್ ಆಗಿಸಿದ ,ಕಾಡುಗಳ ಬಗ್ಗೆ ಭಯ ಓಡಿಸಿ ಪ್ರೀತಿ ಹುಟ್ಟಿಸಿದ , ನಮ್ಮಸುತ್ತಲಿನ ಪರಿಸರದ ಬಗ್ಗೆ, ಜನರ ಬಗ್ಗೆ ಕುತೂಹಲ ಹೆಚ್ಚಿಸಿದ ತೇಜಸ್ವಿಯವರು ಅವರೇ ಎಂದು !!!

ಹೀಗೆ ಮೊದಲಬಾರಿಗೆ ತೇಜಸ್ವಿ ಸಿಕ್ಕಿದ್ದು !  ಗುಂಡಗಿದ್ದರು , ಬಿಳಿಯಗಡ್ಡ ಮುಖಕ್ಕೆ ಒಪ್ಪುತ್ತಿತ್ತು , ಸರಳವಾದ ಕಾಟನ್ ಶರ್ಟ್ ಮತ್ತು ನೀಲಿಬಣ್ಣದ ಜೀನ್ಸ್ ತೊಟ್ಟಿದ್ದರು , ಕಾಲಿಗೆ ಆಫೀಸ್ ಚಪ್ಪಲಿ ಮತ್ತು ಕಣ್ಣಿಗೆ ಕನ್ನಡಕ ಹೇಳಿಮಾಡಿಸಿದಹಾಗಿತ್ತು !  ಹೆಗಲಿಗಿದ್ದ  ಸೈಡ್ ಬ್ಯಾಗು ಅವರು ಕಾಂಕ್ರೀಟ್ ಕಾಡಿನಿಂದ ಮರಳಿ ಅವರ ತೋಟಕ್ಕೆ ಹೋಗುವ ಧಾವಂತವನ್ನು ಸೂಚಿಸುತ್ತಿತ್ತಾ ??? ಗೊತ್ತಿಲ್ಲ ! ಬಹುಶಃ ಅ ಬ್ಯಾಗಿನಲ್ಲಿ ಕ್ಯಾಮೆರಾ ಇತ್ತಾ ??? ಗೊತ್ತಿಲ್ಲ ! ಪುಸ್ತಕಗಳು ಇದ್ದವಾ ? ಇರಬಹುದು ! ಕೇಳುವ ಧೈರ್ಯ ಯಾರಿಗುಂಟು ? ಹೀಗೆ ಯೋಚನಾಲಹರಿ ಎಲ್ಲೆಲ್ಲೋ ಸಾಗಿದ್ದಾಗ ಹಿರಿಯರೊಬ್ಬರು ಒಂದು ಪ್ರಶ್ನೆ ಕೇಳಿದರು ಮತ್ತು ಆ ಪ್ರಶ್ನೆ ತೇಜಸ್ವಿಯವರನ್ನೂ ಪುಳಕಿತರನ್ನಾಗಿಸಿತು !
ಅದೆಂದರೆ " ಕುವೆಂಪುರವರು ಕಾಜಾಣ ದ ಬಗ್ಗೆ ಅವರ ಕೃತಿಗಳಲ್ಲಿ ತುಂಬಾ ಕಡೆ  ಉಲ್ಲೇಖಿಸಿದ್ದಾರೆ  ನೀವು ಅದರ ಫೋಟೋನೇ ತೆಗೆದಿಲ್ಲವಲ್ಲ" ! ಎಂಬುದು. ಈ ಪ್ರಶ್ನೆಗೆ ತೇಜಸ್ವಿಯವರು ಸಣ್ಣಗೆ  ನಕ್ಕುಹೇಳಿದರು " ಬಡ್ಡಿಮಗುಂದು ತಲೆತಪ್ಪಿಸಿಕೊಂಡು ಓಡಾಡ್ತಾ ಇದೆ !" ಆಗಿನ್ನೂ ಇಂಜಿನಿಯರಿಂಗ್ ಗೆ ಕಾಲಿಟ್ಟಿದ್ದ ನಮಗೆ ಕನ್ನಡದ ಶ್ರೇಷ್ಠ ಲೇಖಕರೊಬ್ಬರು ಹೀಗೆ ನಮ್ಮಹಾಗೆಯೇ ಮಾತನಾಡುವುದನ್ನು ನೋಡಿ ಎಲ್ಲಿಲ್ಲದ  ಸಂತೋಷ !

ಮತ್ತೊಬ್ಬರು ಪತ್ರಕರ್ತೆ ಬಹುಶಃ ಡೆಕ್ಕನ್ ಹೆರಾಲ್ಡ್ ನವರಿರಬೇಕು ಇಂಗ್ಲಿಷ್ ನಲ್ಲಿ " Sir how difficult it is to capture birds ? " ಅಂತ ಕೇಳಿದ್ದಕ್ಕೆ ತೇಜಸ್ವಿಯವರು " You see...if you think it is difficult everything is difficult, you need to wait , i have waited for some birds for days, months, sometimes years !" ಅಂದರು .
ಕೆಲವು ಪಕ್ಷಿಗಳಿಗೆ ಕೊಬ್ಬು ಜಾಸ್ತಿಯಂತೆ ಎಲ್ಲ ಸೆಟ್ ಮಾಡಿಕೊಳ್ಳುವವರೆಗೂ ಸುಮ್ಮನಿದ್ದು ಕಡೆಗೆ ಕೈಕೊಡುತ್ತವಂತೆ  ! ಮತ್ತೆ ಕೆಲವು ಸರಿಯಾಗಿ ಪೋಸು ಕೊಡುವುದಿಲ್ಲವಂತೆ ! ಇದೇ ಕಾರಣಕ್ಕೆ ಲೆನ್ಸ್ ಗಳ ಮೇಲೆ ಲಕ್ಷಾಂತರ ಸುರಿದೆ ಎಂದಾಗಲೇ ನನಗೆ ತಿಳಿದದ್ದು, ಕ್ಯಾಮೆರಗಿಂತ ಲೆನ್ಸ್ ಗಳೇ ದುಬಾರಿ ಅದೂ ಲಕ್ಷಗಟ್ಟಲೆ ಎಂದು !
ಮತ್ತೊಬ್ಬ ಹಿರಿಯರು " ಈ ಫೋಟೋಗಳು ಸಂಪೂರ್ಣ ನ್ಯಾಚುರಲ್ಲೋ ಅಥವಾ ಡಿಜಿಟಲ್ ಮಾನ್ಯುಪುಲೇಶನ್ ಮಾಡುತ್ತಿರೋ ? " ಎಂದು ಕೇಳಿದರು !!! ನಾನು ಈ ಪ್ರಶ್ನೆ ತೇಜಸ್ವಿಯವರನ್ನು ಖಂಡಿತ ಕೊಪಗೊಳಿಸುತ್ತದೆ ಅಂದುಕೊಂಡೆ ಆದರೆ ಆದದ್ದು ಬೇರೆಯೇ ! ತೇಜಸ್ವಿ " ಹೌದು ಕೆಲವೊಮ್ಮೆ ಮಾಡಬೇಕಾಗುತ್ತದೆ " ಎಂದು ಬಿಟ್ಟರು ! ಕಡೆಗೆ ಅವರ ಕೈಕುಲುಕಿ, ಒಂದೆರಡು ಚಿಕ್ಕ ಸೈಜಿನ ಹಕ್ಕಿ ಗಳ ಫೋಟೋ ಖರೀದಿಸಿ ಹೊರಡುವಾಗ ಹಕ್ಕಿಚಿತ್ರ ಬಿಡಿಸುತ್ತಿದ್ದ ಹುಡುಗ ಇನ್ನೂ ಕಾರ್ಯಮಗ್ನನಾಗಿದ್ದ  ! ಅವನ ಹುಮ್ಮಸ್ಸು ನೋಡಿ ಖುಷಿಯಾಯಿತು , ತೇಜಸ್ವಿಯವರ ಬಗೆಗಿನ ಪ್ರೀತಿ ಮತ್ತು ಸೆಳೆತ ಇಮ್ಮಡಿಯಾಯಿತು ಮತ್ತು ಆ ಪ್ರದರ್ಶನಕ್ಕೆ ಅವರು ಇಟ್ಟ ಹೆಸರು " ಹಾರಾಡುವ ಹಾಡುಗಳು " ಅತೀ ಸೂಕ್ತ ಅನ್ನಿಸಿತು.




 







 
ಭಯ
ಹಾರುವವನ ರೆಕ್ಕೆ ಕಡಿದೆ
ಸಾವರಿಸಿಕೊ೦ಡೆ.
ಓಡುವವನ ಕಾಲು ಮುರಿದೆ
ಕು೦ತಲ್ಲೆ ಮರುಗಿದೆ
ಕಾಲೆಳೆದು ನಡೆದೆ
ಊರುಗೋಲ ಹಿಡಿದೆ.
ಕಡೆಗದನೂ ಕಸಿದುಕೊ೦ಡೆ !
ಈಗ ತೆವಳುತ್ತಿದ್ದೀನಿ
ತು೦ಬ ನಿಧಾನಗತಿಯಲ್ಲಿ
ನಿನ್ನ ಆಜಾನುಬಾಹು ಕೈಗಳು
ನನ್ನಪಕ್ಕೆಲುಬುಗಳ
ಮುರಿದೇ ಬಿಟ್ಟವೆ೦ಬ ಭಯದಲ್ಲಿ !

Tuesday, 29 September 2015


ಧೂಮಕವನ 
ಸೇದುವವರು  
ಸೇದಿ ಸೇದಿ  ಹಾಳಾಗಿ !
ಸೇದದವರು 
' ಧೂಮಕವನಕ್ಕೆ '
ಮರುಳಾಗಿ !

ಓದಬಾರದು 
ಹೆಣ್ಣು ಮಕ್ಕಳನ್ನು ಗೋಳಾಡಿಸಬಾರದು 
ಕುಡಿದುವಾಹನ ಚಲಾಯಿಸಬಾರದು 
ಜನನಿಬಿಡೆಯಲ್ಲಿ ಸಿಗರೇಟು ಸೇದಬಾರದು 
ಈ ಮೇಲಿನ ಯಾವುದನ್ನೂ ಮಾಡದವರು 
ಈ ಕೆಳಗಿನ ಪದ್ಯಗಳನ್ನು ಓದಬಾರದು !

ವ್ಯವಸ್ಥೆ 

ನಾನು ವ್ಯವಸ್ಥೆಯನ್ನು ಸುಡಲಾಗದ 
ಅಸಹಾಯಕತೆಗೆ ಸಿಗರೇಟು ಸುಡುತ್ತೇನೆ 
ಮತ್ತು ನಾನೂ (ಆ) ವ್ಯವಸ್ಥೆಯಾಗುತ್ತೇನೆ !

ಕೆಲವರು 

ಕೆಲವರು 
ಒಳಗೊಳಗೆ ಸುಡುವುದಕ್ಕೆ 
ಯಾರಿಗೂ ಹೇಳಲಾಗದಕ್ಕೆ 
ಏನೂ ಮಾಡಲಾಗದಕ್ಕೆ 
ಸಿಗರೇಟು ಸೇದುತ್ತಾರೆ !
ಮತ್ತೆ 
ಕೆಲವರು ಹೋಮ 
ಮಾಡುತ್ತಾರೆ !!!

ಕೆಂಡ  ಮತ್ತು ಹೊಗೆ 

ಸಿಗರೇಟನ್ನು ಬೈಯ್ಯುತ್ತಲೇ 
ಹೊತ್ತಿಸಿಕೊಂಡ ಗೆಳೆಯ 
ಹಲವರಲ್ಲಿ ಆಲೋಚನೆಯ 
ಕಿಡಿಹೊತ್ತಿಸುತ್ತಿದ್ದ !
ಆದರೆ 
ಆಲೋಚನೆಕಿಡಿ 
ಉರಿವಬೆಂಕಿಯಾಗದೆ 
ಕೆಂಡವಾಗಿ ಹೊಗೆ ಮಾತ್ರ 
ಆಡುತ್ತಿತ್ತು !!!

ದರ್ಶನ 

ದರ್ಶನ ವಿಧಿಸಿದ ಎಚ್ಚರಿಕೆ 
"ಧೂಮಕವನ  ಆರೋಗ್ಯಕ್ಕೆ ಹಾನಿಕಾರಕ" !
ಆದರೆ ಇದರಿಂದ ಸಾವು ನೋವು 
ಖಂಡಿತ ಸಂಭವಿಸುವುದಿಲ್ಲ !!!

ಧೂಮಪಾನ 

ಸೇದದವರು ಬಿಟ್ಟುಬಿಡಿ ಎನ್ನುವುದು 
ಅಸೂಯೆಯಿಂದ !
ಸೇದಿ ಬಿಟ್ಟವರು ಬಿಡಿಸಲುಯತ್ನಿಸುವುದು 
ಮತ್ಸರದಿಂದ !!!

ಗೀಟು 

ಧೂಮಪಾನ ಘಾಟು 
ಅದಕ್ಕೇ ಎಳೆವುದು
'ದ' ಕ್ಕೆ  ಗೀಟು !

ಭೈರಾಗಿ 

ಭೈರಾಗಿಗಳು ಭಂಗಿ ಹೊಡೆದು 
ಶಿವನ ಕಾಣುವರು !
ನಮ್ಮ ನಿಮ್ಮಂಥವರು ತೆಗಳಿ 
ಮತ್ತೊಂದನು ಹಚ್ಚುವೆವು !!!

ಘಾಟು 

ಭಾರೀ ಘಾಟು ಸಿಗರೇಟು 
ಅದಕೆಂದೇ ನಾ ಹೊಗೆಯನು 
ಹೊರಬಿಡುವುದು !

ಸುತ್ತಮುತ್ತಲಿನ ಪುಕ್ಕಟ್ಟೆಯವರು 
ಸುಮ್ಮನೆ ಹಾಗೂ ಹೀಗೂ 
ಕೆಮ್ಮುವರು !

ಪಟಾಕಿ ಹೊಡೆದರೂ 
ಸಿಗರೇಟು ಹೊಡೆದರೂ 
ದುಡ್ಡು ಸುಡುತ್ತೀಯ
ಎನ್ನುವರು !

ತಾವೂ ಏಕಾಂತದಲಿ 
ಬೆರಳುಗಳಲಿ ಸಿಗರೇಟನಿಟ್ಟ 
ಪೋಸು ಕೊಟ್ಟು ಕೊಳ್ಳುವರು !
ಮತ್ತು 
ಈ ಪದ್ಯ ಓದಿದಾಗಲೆಲ್ಲ 
ಮನಸಲ್ಲೇ ಕಡ್ಡಿಗೀರಿ 
ಹೊಗೆಯಲ್ಲಿ ಸಿಕ್ಕು  
ಖೆಮ್ಮುವರು !!!













Saturday, 12 September 2015

ಸಿಗರೇಟು

ವರ್ತುಲ ವರ್ತುಲ ಸಿಗರೇಟಿನ ಹೊಗೆಯೆ೦ದು
ಅಡಿಗರು ಬರೆದಾಗ ಕುವೆ೦ಪು ಕೆ೦ಡಾಮ೦ಡಲ !

ಸಿಗರೇಟಿನ ಮ೦ದಬೆಳಕಿನಲ್ಲಿಯೇ ಅದೂ
ಮೈಸೂರಿನ ಮ೦ದಣ್ಣನ ಕಾಫಿ ಹೌಸಿನಲ್ಲೇ
ಈ ಕವನ ಹುಟ್ಟಿರಬಹುದಾ ???

ಮ೦ದಬೆಳಕಿನ, ಘಾಟಿನ, ಎನೂ ಸ್ಪಷ್ಟವಾಗಿ
ಕಾಣದ ಸ್ಥಿತಿ ಯಲ್ಲಿ  ನವ್ಯಕಾವ್ಯಗಳು ಹುಟ್ಟಿ
ಅವು ಒದುಗರಿಗೂ ಅರ್ಥವಾಗದೆ
ಕಾಡಿರಬಹುದಾ ???

ಸಿಗರೇಟಿನ ಹೊಗೆ ಕೋಣೆಯನ್ನೆಲ್ಲ
ಆವರಿಸಿ ಮಾಯಾಲೋಕ ಸೃಷ್ಠಿಸಿ
ತೇಜಸ್ವಿಯವರ ಕರ್ವಲ್ಹೊ ಕಾದ೦ಬರಿಯ
ಮ೦ದಣ್ಣ ಹುಟ್ಟಿರಬಹುದಾ ???

ಈಗಬಿಡಿ ಸಿಗರೇಟು ಹಾನಿಕಾರಕ
ನವ್ಯಕಾವ್ಯ ಇನ್ನೂಹಾನಿಕಾರಕ !
ಸಿಗರೇಟಿನ ಆ೦ಗಡಿಯಲ್ಲೇ ಸಿಗುವ
"ನಿಕೋರೆಟ್ಟು" !
ಒ೦ದು ಹಿಡಿಸಲು ಒ೦ದು ಬಿಡಿಸಲು
ಎರಡೂ ಅ೦ಗಡಿಯವಗೆ ಬಿಜಿನೆಸ್ಸು !

ಒ೦ದು ಧ್ಯಾನ ಹೇಳಿಕೊಟ್ಟರೆ
ಮತ್ತೊ೦ದು ಕಣ್ನು ತೆರೆಸುವುದು
ಒ೦ದು ಕುವೆ೦ಪುವಾದರೆ
ಮತ್ತೊ೦ದು ಅಡಿಗರ೦ತೆ!

ದರ್ಶನ್ ಜೆ

Thursday, 27 August 2015

ಮಹತ್ವಾಕಾಂಕ್ಷಿ 

ನರಚರ್ಮಗಳನೆಳೆದು  ನಗುವುದು
ಸುಮ್ಮನೆ ಬೊಗಳೆಹೊಡೆವುದು
ಶಿವಪೂಜೆಗೆ  ಕರಡಿಯಂತೆರಗುವುದು
ತಲೆಖಾಲಿ ಇದ್ದಾಗಲೆಲ್ಲ ನಾಲಗೆಗೆ
ಕೆಲಸಕೊಡುವುದು , ಕಂಡದ್ದಕ್ಕೂ
ಕಾಣದ್ದಕ್ಕೂ ಮರುಗುವುದು
ಅಲ್ಲೊಂದ್ ಇಲ್ಲೊಂದನಾಡುವುದು
ಬೆಟ್ಟಹತ್ತಲಾಗದೆ ಅಟ್ಟಕ್ಕೆ ಹಗ್ಗಹೊಸೆವುದು
ಮಹತ್ವಾಕಾಂಕ್ಷಿಯ ಜರಿವುದು  !
ತಿಳಿಯಿತು 

ಅಚಾನಕ್ಕಾಗಿ ಏನೋ ಹೊಳೆದಂತಾಗಿ
ಥಟ್ಟನೆ ಬರೆಯಲು ಕುಳಿತೆ
ಸಾಧಾರಣ ಅನಿಸಿತು !
ನನ್ನ ಶಬ್ಧಸಂಪತ್ತನೆಲ್ಲ
ಉಪಯೋಗಿಸಬೇಕೆನಿಸಿತು.
ಹಾಗೆಯೇಮಾಡಿದೆ !
ಬರೆದದ್ದನ್ನು ಒಮ್ಮೆ ಓದಿ
ನನಗೆನಾನೆ ಭೇಷ್ ಎಂದುಕೊಂಡೆ !
ಮತ್ತೊಮ್ಮೆ ಮಗದೊಮ್ಮೆ ಓದಿದೆ
ಯಾಕೋ ಶಬ್ಧಗಳ ಭಾರಕ್ಕೆ
ವಾಕ್ಯಮುರಿದುಬಿತ್ತು !


ದರ್ಶನ್ ಜೆ

Saturday, 15 August 2015

ನನ್ನ ಕಥೆಗಳು 

ನನ್ನ ಕಥೆಗಳು ಎಲ್ಲಿವೆ ?
ಹಟ್ಟಿಯಲ್ಲೋ, ಹಾದಿಯಲ್ಲೋ
ಕತ್ತಲೊಳಗಿನ ಬಿತ್ತಿಯಲ್ಲೋ ?
ನನ್ನ ಚಿತ್ತದ  ಬ್ರಾ೦ತಿಯಲ್ಲೋ
ವರ್ತಮಾನದ ಭಾವದಲ್ಲೋ
ಗತಿಸಿಹೋದ ಗೋರಿಯಲ್ಲೊ
ನಾಳೆಯಡೆಗಿನ ಶೂನ್ಯದಲ್ಲೋ !
ನಾನೇ ಕಟ್ಟುವ ಕೂಟೆಯಲ್ಲೋ
ಬರೆಯಲಾಗದ ಕವಿತೆ ಯಲ್ಲೋ ?

Saturday, 8 August 2015


ಈGO 
ನಾವು ಸತ್ತು ಬಹಳ ದಿನವಾಗಿವೆ

ಈಗ ಉಳಿದಿರುವುದು ನಾನು ಮಾತ್ರ !

Tuesday, 7 July 2015

ಸ೦ಕ್ರಾ೦ತಿ

ಯಾವುದೋ ತಿ೦ಗಳಿನ ಯಾವುದೋ
ದಿನಗಳೆದರೆ ಒಳಿತಾಗುವುದ೦ತೆ.
ಸುಮ್ಮನೆ ಕುಳಿತರೆ ಗಟ್ಟಿ ಶೂನ್ಯ ಸ೦ಪಾದನೆ !
ಒಳಿತಾಗುವುದಕ್ಕೆ ಬೆನ್ನು ಬಗ್ಗಬೇಕಲ್ಲವೆ ಇ೦ದು ?
ಕಾಳುಚೆಲ್ಲದೆ, ಉತ್ತಿಬಿತ್ತದೆ ಬ೦ದೀತೆ ಪಸಲು
ತ೦ದೀತೆ ಸ೦ಕ್ರಾ೦ತಿ ಸೊಬಗು ?
ಸೂರ್ಯ ಪಥಬದಲಾಯಿಸುವನೆ೦ದು
ಸುಮ್ಮನೆ ಕಾಯುತ್ತಾಕುಳಿತರೇನು ಬ೦ತು ನಾವು !

Sunday, 17 May 2015

ಏಕತಾನ.....
ಸುಮ್ಮನೆ ಹೊಯ್ಯುವ ಸ೦ಜೆ ಮಳೆ
ಕಿಟಕಿಯಾಚೆಗಿನ ಚಿಟಪಟ ಸದ್ದು
ಆಗಾಗ ಬ೦ದುಹೋಗುವ ಹಾಳು ಕರೆ೦ಟು
ಭಾನುವಾರದ ಖುಷಿಗೆ ಬೋ೦ಡದ ರುಚಿ
ಬದುಕು ಏಕತಾನವಲ್ಲ
ಹಾಗೆ೦ದವಗೆ ಭವಿಷ್ಯವಿಲ್ಲ !

Wednesday, 25 February 2015

ಭಗವಧ್ಗೀತೆ
ಮತಿಯನ್ನೇ ಸುಟ್ಟುಕೊ೦ಡಮೇಲೆ
ಗೀತೆಯಾದರೇನ೦ತೆ ಗ್ರ೦ಥವಾದರೇನ೦ತೆ ?
ಬೈಬಲ್ ಅಥವಾ ಕುರಾನಾದರೇನ೦ತೆ ?
ಮ೦ದಿರ ಗುರುದ್ವಾರ ಮಸೀದಿ ಇಗರ್ಜಿಗಳ ಭೇಟಿ
ಬತ್ತಿದ ಕೆರೆಯಲ್ಲಿ ನೀರ ಬಗೆದೆ೦ತೆ !
ಆತ್ಮಸತ್ತು ದೇಹ ಉಳಿದ೦ತೆ.....