Thursday, 6 September 2018

ಹೋಗಿಬಿಟ್ಟರು


ಹೋಗಿಬಿಟ್ಟರು

ಇದ್ದವರನ್ನೆಲ್ಲಾ ಇದ್ದದ್ದನ್ನೆಲ್ಲಾ ಬಿಟ್ಟು
ಎಲ್ಲಿಗೋ ಏನೋ ಎಂಬ ಗುಟ್ಟ ಬಿಟ್ಟು.... 

ನೋವು ನಲಿವ ಉಂಡು
ತಮ್ಮ ಬಿಂದಿಗೆಯ ನೀರ ತುಂಬಿಕೊಂಡು
ತಣಿಸಿದ್ದು ಉಣಿಸಿದ್ದು ಬಿಂದಿಗೆಯ ನೀರೇ

ಮೈಯಲ್ಲಿ ಮನದಲ್ಲಿ ಅಮೃತದಂತೆ ಹರಿದು
ಎಲ್ಲಿಂದ ಬಂದಿತ್ತೋ ಅಲ್ಲಿಗೇ ಹೋಗಿರಬಹುದು.....

ಬರಬಹುದು ಮತ್ತೆ ಮಳೆಯಾಗಿ
ಕಾಯಬೇಕಷ್ಟೆ ನಾವು ಬೊಗಸೆಯನು ಚಾಚಿ
ಮನಸಲ್ಲಿ ನಂಬಿಕೆಯ ಶಾಹಿಯ ಗೀಚಿ

Sunday, 19 August 2018

ಅರೆಬರೆ ಹಾಡುಗಳು

ಅರೆಬರೆ ಹಾಡುಗಳು
ನನ್ನೊಳಗೆ ಹುಟ್ಟಿಬೆಳೆದು
ಇನ್ನೇನು ಜಗತ್ತಿಗೆ
ಕಾಣಿಸುವುದರೊಳಗೆ
ಕಳಚಿದವು
ನಿಲ್ಲದ ಬ್ರೂಣದಂತೆ.

ನಾ ಹಾಡಬಲ್ಲೆನೋ
ಹಾಡ ಕಟ್ಟಬಲ್ಲೆನೋ
ನನಗೇ ತಿಳಿಯದೇ
ಬರೀ ಕನಸಿನ ಹಂಗಲ್ಲೇ
ಪ್ರಸವದ ನೋವು.

ಆಗಾಗ ಅರೆನಿದ್ದೆಯ
ಮಂಪರಿನೊಳಗೆ
ಆಳದಿ ಗೆಜ್ಜೆ ಕಟ್ಟಿದ ಸದ್ದು
ಕುಣಿದದ್ದು ಅಸ್ಪಷ್ಟ
ಆದರೂ
ಎದ್ದ ಮರುದಿನವೆಲ್ಲ
ತಲೆ ಗಿರಗಟ್ಟಲೆ !

ಹಾಡು ಹುಟ್ಟದಿದ್ದರೇನಂತೆ
ರಾಗತಾಳಕ್ಕೆ ಮಿಡಿಯದೇ ಹೃದಯ
ಅಂದುಕೊಂಡಾಗಲೆಲ್ಲ ದುಃಖ
ಉಮ್ಮಳಿಸಿ ಬಂದು
ಕಲಕುವುದು ಮನವ
ಬಗ್ಗಡವಾಗಿಸಿ ಬದುಕ !


ಸಾಗರ ಜಂಗಮ

ಬರಹಗಾರ ಸಾಗರದಂತೆ
ಸಾಹಿತಿ ಶಿಖರದಂತೆ

ಒಂದು ಮೊರೆಯುತ್ತದೆ ಪೊರೆಯುತ್ತದೆ
ಹರಿಯುತ್ತದೆ ಏರುತ್ತದೆ ಇಳಿಯುತ್ತದೆ

ಮತ್ತೊಂದು

ಎದೆಸಟೆದು ನಿಂತಲ್ಲೇ ನಿಚ್ಚಳವಾಗಿ ನಿಂತು
ಹಾದುಹೋಗುವ ಗಾಳಿಮೋಡವ ತಾಕುತ್ತದೆ
ತನ್ನಿಂದಲೇ ಮಳೆಗಾಳಿಯೆಂದು ಬೀಗುತ್ತದೆ !

ಸಾಗರ ಜಂಗಮ ಶಿಖರ ಸ್ಥಾವರ !

ಡೊಂಕು ಡ್ರಿಂಕು

ಕುಣಿಯಲಾರದವಳಿಗೆ
ನೆಲ ಡೊಂಕು
ನಡೆಯಲಾರದವನಿಗೆ
ಇನ್ನೊಂದು ಡ್ರಿಂಕು !

ದೀಪ ಮತ್ತು ನಕ್ಷತ್ರ

ಬದುಕಿದ್ದಾಗ ನಕ್ಕವನು
ಅವರಿವರಿಗೆ ಮಿಕ್ಕವನು
ಮನೆ ಮನಗಳ ಹೊಕ್ಕವನು
ನಕ್ಷತ್ರವಾಗದೆ
ನಮ್ಮ ನಿಮ್ಮ ನಡುವಿನ
ದೀಪವಾಗಿರುತ್ತಾನೆ !


ಹೊಳೆಯಬೇಕಿತ್ತು

ಉಜ್ಜಿ ಉಜ್ಜಿ
ತೊಳೆದದ್ದೆಲ್ಲಾ
ಬೆಳ್ಳಗಾಗುವುದಿದ್ದರೆ
ನನ್ನ ಕಣ್ಣೂ
ಹೊಳೆಯಬೇಕಿತ್ತು !

ಕುಂಡೆ ನೋವು !

ಸುಸ್ತಾಗಿತ್ತು
ನನ್ನ ಹೆಣವ ನಾನೇ ಎಳೆದು
ದಣಿವಾರಿಸಿಕೊಳ್ಳಲು
ಅಲ್ಲೇ ಕಂಡ ಕುರ್ಚಿಯಲ್ಲಿ
ದಿಮ್ಮನೆ ಕುಂತೆ
ಕುರ್ಚಿಗೆ
ಒಂದು ಕಾಲೇ ಇರಲಿಲ್ಲ
ದೊಪ್ಪನೆ ಬಿದ್ದ ಕುಂಡೆಗೆ
ಮೂರುದಿನದ ನೋವು !


ಸರಿಬೆಸ

ಬೆಸ  ಸೇರಿ ಸರಿಯಾಗಿ
ಸರಿಯೊಡೆದು ಬೆಸವಾಗಿ
ಸರಿಬೆಸದಾಟವೇ  ಬದುಕು !

ಕವಿತೆ !

ನುಣುಪಾದ ಲೇಖನಿಯ
ಕಪ್ಪನೆಯ ಶಾಹಿ
ಕಾಗದದ ಮೈಮೇಲೆ
ಹರಿದಾಡಿದಾಗೆಲ್ಲ
ಹುಟ್ಟುತ್ತಿತ್ತು ಕವಿತೆ !

ಭುವಿಯ ಓಲಾಟ

ಭುವಿಯ ಓಲಾಟಕೆ
ಅಲೆಗಳೇ ಹೆರಳು
ಪುಟಿದೇಳುತ್ತಲಿವೆ
ಚಂದ್ರನು ನಗಲು
ಭಾವದ ಯಾನಾದಿ
ತೀರಕೆ ಬರಲು
ಮುತ್ತನಿಡುತಿವೆ
ಕಾಲ್ಗಳ ಬೆರಳು 

ವಿಕಟ

ವಿಕಟ ಕವಿಯೊಬ್ಬ
ಮನೆಯಲ್ಲೊಂದು ಬಿಟ್ಟು
ಬೇರೆಲ್ಲೆಡೆ ಪ್ರಕಟಗೊಳ್ಳುತ್ತಾನೆ !

ಹೊಟ್ಟೆ ಹೊರೆಯುವಿಕೆ

ದಿನನಿತ್ಯವೂ
ಹೆಂಡತಿಯೊಡನೆ ಜಗಳವಾಡುವ
ಅಸಹಾಯಕ ಕವಿಯೊಬ್ಬ
ಪ್ರೇಮ ಗೀತೆಗಳ ಬರೆದು
ಹೊಟ್ಟೆ ಹೊರೆದುಕೊಳ್ಳುತ್ತಾನೆ !


ಖುಷಿ !

ಕೆಲವರಿಗೆ
ಫೇಸ್ ಬುಕ್ಕಿನಲ್ಲಿ
ಲೈಕ್ ಸಿಕ್ಕಿದರೆ
ಆಫೀಸ್ನಲ್ಲಿ ಹೈಕ್
ಸಿಕ್ಕಷ್ಟೇ ಖುಷಿ !

ಹಾಡೇ ಮರೆತುಹೋಗಿದೆ !

ಇನ್ನೂ
ತೋರುಬೆರಳೆ ಮೇಲೆ
ಹಚ್ಚಿಸಿಕೊಂಡ
ಕಪ್ಪು ಶಾಹಿಯೇ ಮಾಸಿಲ್ಲ

ಅಪ್ಪನನ್ನು ಕುರ್ಚಿಯಮೇಲೆ ಕುಳ್ಳಿರಿಸಿ
ಮತಗಟ್ಟೆಗೆ ಎತ್ತುಕೊಂಡು ಹೋದ
ರೆಟ್ಟೆಗಳಲ್ಲಿನ ನೋವು ಇಳಿದಿಲ್ಲ

ಅತಿಹೆಚ್ಚು ಮತದಾನವಾಯಿತು ಎಂದು
ಸಂಬ್ರಮಿಸಿದೆದೆಬಡಿತ ಕಮ್ಮಿಯಾಗಿಲ್ಲ

ಆಗಲೇ ವ್ಯಾಪಾರ ಶುರುವಾಗಿದೆ
ಮನಸ್ಸನೇ ಮಾರಿಕೊಂಡಮೇಲೆ
ಕುದುರೆಯೋ ಕತ್ತೆಯೋ ಯಾವುದಾದರೇನಂತೆ ?
ಬೇಕೆಂದಕಡೆಗೋಡುತ್ತದೆ !

ಪ್ರಾಮಾಣಿಕರನ್ನು ಪ್ರಶ್ನಿಸಿ
ಅಪ್ರಾಮಾಣಿಕರ  ಖಿಲಾಡಿತನವನ್ನು ಹೊಗಳಿ
ಸಮಾಜ ಆತ್ಮಹತ್ಯೆಯ ದಾರಿಹಿಡಿಯುತ್ತಿದೆ !

ರಾಜಕೀಯ ತವಡುಕುಟ್ಟಿ
ಹಾಡೇ ಮರೆತುಹೋಗಿದೆ !


ಸೇಲ್ ಆಯ್ತು !

ಫ್ಲಿಪ್ಕಾರ್ಟ್ ನಲ್ಲಿ
ಸೇಲ್ ಇರ್ತಾ ಇತ್ತು
ಇವಾಗ
ಫ್ಲಿಪ್ಕಾರ್ಟ್ ಎ
ಸೇಲ್ ಆಯ್ತು !

ರುಚಿಕಟ್ಟೀತೇ ಬಾಳು ?

ಅವೆಷ್ಟು ಕಥೆಗಳು
ಅಡಗಿ ಕುಳಿತಿವೆ ಒಳಗೆ ?
ಭಯಕ್ಕೋ ಸಂಭ್ರಮಕ್ಕೋ
ಬಿಡುಗಡೆಗೋ ಗೊತ್ತಿಲ್ಲ !

ಅಂತರಾಳದ ತಿಳಿಯಕಲಕಿದರೆ
ಬರಬಹುದೇನೋ
ಕಥೆಯಾಗಿ ಕವಿತೆಯಾಗಿ ಬೈಗುಳವಾಗಿ
ಕಣ್ಣೇರಾಗಿ ನಗುವಾಗಿ ಭಾಷ್ಪವಾಗಿ
ಕಲಕುವ ಕೈಯ್ಯ ಕೂಸಾಗಿ

ಆದರೆ
ಎಲ್ಲರೂ ಸಭ್ಯರಾಗಹೊರಟರೆ
ಕಲಕುವರಾರು ?
ತಿಳಿಯನಷ್ಟೇ ಉಂಡು ಉಣಬಡಿಸಿದರೆ
ರುಚಿಕಟ್ಟೀತೇ ಬಾಳು ? 

ಹೂ ಬಿದ್ದ ಸದ್ದು

ಹೂ ಬಿದ್ದ ಸದ್ದು
ಕೇಳಿಸಿವುದು ಇಬ್ಬರಿಗೆ
ಒಂದು ಭುವಿಗೆ
ಇನ್ನೊಂದು ಕವಿಗೆ !

ಯುವ ಕವಿಯ ಬಂಧಿಸಿ

ಓ ಯಾರಲ್ಲಿ ?
ಬಂಧಿಸಿ ಈ "ಯುವ " ಕವಿಯನ್ನು !
ಮುಟ್ಟುಗೋಲು ಹಾಕಿಕೊಳ್ಳಿ
ಇವನ ಕವಿತೆಗಳನ್ನು
ಈತ
ತನ್ನ ಅಸಹಾಯಕತೆಯನ್ನು
ಪದ್ಯವಾಗಿ ಹಂಚಿ
ಸಮಾಜದ
ಶಾಂತಿ ಕದಡಿದ್ದಾನೆ !

ಬಲ ಭೀಮ !

ಪಾರ್ಟಿ ಬದಲಿಸುವವರು
ಜಾತಿಯೇಕೆ ಬದಲಿದರು ?
ತನಗಾಗದ ಜಾತಿ
ತನ್ನದಲ್ಲದ ಪಾರ್ಟಿ
ಎರಡನೂ ಬದಲಿಸಿದವನು
ಬಲ ಭೀಮ !

ಜಾತಿವಾದನಾ ?

ಧರ್ಮ ಧರ್ಮಗಳ 
ನಡುವೆ ಹತ್ತಿಕ್ಕಿದರೆ 
ಕೋಮುವಾದ 

ಜಾತಿ ಜಾತಿಗಳ 
ನಡುವೆ ಹತ್ತಿಕ್ಕಿದರೆ 
ಜಾತಿವಾದನಾ ?

ಅಸಂಬದ್ಧ

೧)

ರೈಲ್ವೆ ಬ್ರಿಡ್ಜುಗಳು
ದ್ವಿಚಕ್ರಿಗಳ ಪಾಲಿನ
ಅಗೋಚರ ಸಿಗ್ನಲ್ಲುಗಳು !

೨)

ಸೂರಿಲ್ಲದವನಿಗೂ
ಕಾರಿಲ್ಲದವನಿಗೂ
ಫ್ಲೈಓವರ್ ಗಳು
ತಾತ್ಕಾಲಿಕ ತಂಗುದಾಣಗಳು !

೩)

ಟೋಲ್ ಬೂತುಗಳು
ಹೆದ್ದಾರಿಯಲ್ಲಿ ಹಾಯುವವರಿಗೆ
ಉಪದ್ರ ಕೊಡುವ ಭಿಕ್ಷುಕರು !




ಅಂಬೇಗಾಲಿನ ನಾಲ್ಕುಗಳು !

ಪದಗಳ ಪೋಲುಮಾಡದ
ಜಿಪುಣ ಯುವಕವಿಯ
ತಾಜಾ ಸೊಲ್ಲುಗಳಿವು
ಅಂಬೇಗಾಲಿನ ನಾಲ್ಕುಗಳು !

Sunday, 15 April 2018

ಪ್ರೇಕ್ಷಕ ಪ್ರಭುವಾಗುವ ಕಾಲ

ಚಳಿ ಕಳೆದು ಬಿಸಿ ಏರಿದೆ
ಬಾರುಗಳು ತು೦ಬಿ ತುಳುಕಿವೆ
ಹೊಟೆಲ್ಲುಗಳಲಿ ಜನ ಸ೦ದಣಿ ಹೆಚ್ಚಾಗುತ್ತಿದೆ

ಮಡ್ಡಿ ಮಡಯ ಎ೦ಕ ಗುರವರಿಗೆ 
ಬೆಲೆ ಬರತೊಡಗಿದೆ
"ಶಿ ಜಿನ್ ಪಿ೦ಗ್ " ನ೦ತಹ 
ಗಡುಸು ಮುಖಗಳು ಗಿ೦ಜುತ್ತಿವೆ

ರಸ್ತೆಯ ಮೇಲೆ ಟಾರು ಓಡಿದೆ
ನಲ್ಲಿಯಲಿ ನೀರು ಸೋರಿದೆ
ಬೇಸಿಗೆಯಲ್ಲೂ ಕರೆ೦ಟು ಉಳಿದಿದೆ

ಮಲಗಿದ್ದ ನಾಯಿಗಳು ಬ್ರೆಡ್ಡಿಗಾಗಿ ಎದ್ದು ನಿ೦ತಿವೆ
ಕೊರಳಲಿದ್ದ ಚೈನು ಕೈಲಿದ್ದ ಉ೦ಗುರಗಳು ಮಾಯವಾಗಿ 
ಹೆಗಲಿಗೆ ಟವಲ್ಲು ಬ೦ದಿದೆ

ಹಳ್ಳಿಗಳಿಗೆ ಜೀವ ಬ೦ದಿದೆ
ಆದರ್ಶಗಳ ಮಸ್ತಕಾಭಿಷೇಕ ನಡೆದಿದೆ
ಆಶಾವಾದಕೂ ನಿರಾಶಾವಾದಕೂ 
ವಾಗ್ವಾದ ಎರ್ಪಟ್ಟಿದೆ

ಗಣಿತ ಅಗಣಿತ ಸೂತ್ರಗಳು ಮ೦ಡಿಗೆ ಹಾಕಿವೆ
ಪ್ರೇಕ್ಷಕ ಪ್ರಭುವಾಗುವ ಕಾಲ ಒ೦ದಿದೆ
ಚುನಾವಣೆ ಬ೦ದಿದೆ !

ಮಿಡಿತವು ನಿಲ್ಲುವುದೇ

ಅಮ್ಮ ಎಂದೊಡನೆ ಇದೋ 
ನನ್ನ ಹೃದಯ ಕಂಪಿಸುತಲಿದೆ 
ನಿನಗೂ ಹಾಗೇ ಅನಿಸುವುದಾ ? 
ಇದೆಂಥಾ ಪ್ರಶ್ನೆ ನಿನದು
ಎನ್ನದಿರು “ ನನ್ನಮ್ಮಾ” 
ಕುತೂಹಲವಷ್ಟೆ ನನಗೆ 

ಹೊಕ್ಕುಳಬಳ್ಳಿಯ ಕತ್ತರಿಸಿದರೂ
ಮಿಡಿತವು ನಿಲ್ಲುವುದೇ 
ಕರುವು ಅಂಬಾ ಎಂದೊಡನೆ
ಹಸುವಿನ ಮೊಲೆಯು ಜಿನುಗುವುದಂತೆ 
ನಾ ಅತ್ತಾಗಲೆಲ್ಲಾ ನಿನ್ನ ಎದೆಹಾಲಿನ 
ಭರ್ತಿ ಊಟ ನನಗೆ

ಚಳಿಯಾದಾಗಲೆಲ್ಲ ನಿನ್ನ ತಬ್ಬಿ ಮಲಗಿದೆ 
ಹುದುಗಿಸಿ ನನ್ನ ಮೊಗವ ನಿನ್ನೆದೆಯಲಿ
ಎಷ್ಟು ಬೆಚ್ಚಗಿತ್ತು ಆ ಅಪ್ಪುಗೆ 
ಅಪ್ಪ ಏನೆಂದುಕೊಂಡನೋ !

ಅತ್ತಾಗೆಲ್ಲ ಮುದ್ದಿಸಿದೆ ಕೋಪಿಸಿಕೊಳ್ಳದೆ 
ನಕ್ಕಾಗೆಲ್ಲ ಮತ್ತಷ್ಟು ರಮಿಸಿದೆ ಮಿತಿಯಿಲ್ಲದೆ 
ಎಲ್ಲವನ್ನೂ ಸಲಹಿದೆ ಸ್ಥಿತ ಪ್ರಜ್ಞಳಾಗಿ
ಆಗೀಗ ಕಂಡಿತು ಕಣ್ಣಂಚಲ್ಲಿ ಹನಿ 

ಎಲ್ಲವನ್ನೂ ಅಂತರಂಗದಲ್ಲೇ ಇಟ್ಟುಕೊಂಡು ಬಿಡುವವಳು ನೀನು 
ಅದಕೆ ಮೂರ್ಖನಂತೆ ಕೇಳತೊಡಗಿದ್ದೇನೆ
ಏನೇನೇನೋ ನಾನು 
ಕ್ಷಮಿಸು ನೀನು

ಯಾವ ಮಾತ ಕೇಳಲಿ

ಯಾವ ಮಾತ ಕೇಳಲಿ 
ಬರದೆ ಹೇಗೆ ಹಾಡಲಿ 
ನಿನ್ನ ದನಿಗೆ ನಾನು ಗುನುಗಿ 
ನಟನೆ ಏಕೆ ಮಾಡಲಿ ?

ನನ್ನ ಪಾಡು ನನಗಿರಲಿ 
ನನ್ನ ಹಾಡು ನನಗೆ 
ಸುಖ ದುಃಖ ಬಯಕೆ ಬವಣೆ
ನನ್ನೊಳಗೆ ಮೀಟಲಿ

ಹಾಡಲಿಕ್ಕೆ ಕಂಠ ಸಾಕೆ
ಮನಸು ಮಿಡಿಯ ಬೇಡವೇ 
ಚಿಗುರು ಮಾವ ಉಂಡು ಹಾಡೋ 
ಪಕ್ಷಿ ನಾನೂ ಅಲ್ಲವೇ ?

Saturday, 14 April 2018

ಗಾಂಧಿ ಮತ್ತು ಅಂಬೇಡ್ಕರರು !

ತುಂಡು ಬಟ್ಟೆಯನುಟ್ಟು
ನಿನ್ನಂತೆ ನಾನಾಗಬಲ್ಲೆ
ಎಂದು ಸಾಭೀತು ಪಡಿಸಿದವರು
ಗಾಂಧಿ !

ನೀಟಾಗಿ ಇಸ್ತ್ರಿ ಮಾಡಿದ
ಸೂಟನು ತೊಟ್ಟು
ನನ್ನಂತೆ ನೀವಾಗಬಲ್ಲಿರಿ
ಎಂಬುದ ತೋರಿಸಿ ಕೊಟ್ಟವರು
ಅಂಬೇಡ್ಕರರು !

ಹೈ ಟೆಕ್ ಗುಳ್ಡುಗಳು

ಬೇಸಿಗೆಯಲ್ಲಿ ಕೋಟ್ ಹಾಕುವವರು .....
ಚಳಿಯಲೂ ಎ ಸಿ ಗಾಗಿ ಪರಿತಪಿಸುವವರು ....
ಮನೆಗೆಲಸವ ಮಾಡದೆ ಟ್ರೆಡ್ ಮಿಲ್ನ ಮೇಲೆ ಓಡುವವರು  .....
ಹಸಿದಾಗ ತಿನ್ನದೇ ಗಡಿಯಾರ ನೋಡುವವರು .....
ಎಲ್ಲ ಸಮಸ್ಯೆಗೂ google ನ ಕೇಳುವವರು ......
ಟ್ರಾಫಿಕ್ನಲ್ಲಿ ಜೀವನ ಕಳೆದರೂ ವೋಟಿನ ಬೂತಿಗೆ ಬಾರದವರು ....
ಮೆಸೇಜ್ ಗೆ ಹಿಗ್ಗುವವರು ಮಾತನಾಡಿಸಿದರೆ ಕುಗ್ಗುವವರು ....
ಈ ಸಾಲುಗಳ ಬರೆದವರು ......
ಹೈ ಟೆಕ್ ಗುಳ್ಡುಗಳು ಸರ್ವಜ್ಞ !

ಬೊಗಸೆಯನು ಚಾಚಿ

ಹೋಗಿಬಿಟ್ಟರು
ಇದ್ದವರನ್ನೆಲ್ಲಾ ಇದ್ದದ್ದನ್ನೆಲ್ಲಾ ಬಿಟ್ಟು
ಎಲ್ಲಿಗೋ ಏನೋ ಎಂಬ ಗುಟ್ಟ ಬಿಟ್ಟು.... 

ನೋವು ನಲಿವ ಉಂಡು
ತಮ್ಮ ಬಿಂದಿಗೆಯ ನೀರ ತುಂಬಿಕೊಂಡು
ತಣಿಸಿದ್ದು ಉಣಿಸಿದ್ದು ಆ ಬಿಂದಿಗೆಯ ನೀರೇ
ಮೈಯಲ್ಲಿ ಮನದಲ್ಲಿ ಅಮೃತದಂತೆ ಹರಿದು
ಎಲ್ಲಿಂದ ಬಂದಿತ್ತೋ ಅಲ್ಲಿಗೇ ಹೋಗಿರಬಹುದು.....

ಬರಬಹುದು ಮತ್ತೆ ಮಳೆಯಾಗಿ
ಕಾಯಬೇಕಷ್ಟೆ ನಾವು ಬೊಗಸೆಯನು ಚಾಚಿ
ಮನಸಲ್ಲಿ ನಂಬಿಕೆಯ ಶಾಹಿಯ ಗೀಚಿ

ನನಗೆ ನೀನೇ ಮಗು !

ನಿನ್ನ ನಗು
ಓಹ್......  ಎಂಥಾ ಸೊಬಗು !
ಉಂಟೇ ಅದಕೆ
ಅಳೆವ ಮೊಬಲಗು ?

ಚಿನ್ನ ಬೆಳ್ಳಿ
ಕೇಳಲಿಲ್ಲ ನೀ
ಅದಕಿಂತ ಮಿಗಿಲು
ನಿನ್ನೀ ನಗುವೆಂದು
ಹೇಗೆ ಹೇಳಲಿ ನಾನು ?

ನಾಚಿಕೆ ...ಜುಗ್ಗನೆಂದು
ಕರೆದರೆ ನೀನು !

ಒಂದು ನೂರು ರೂಪಾಯಿಗೆ
ಅವೆಷ್ಟು ಖುಷಿ !
ತಿಂದ ಹುರಿದ ಜೋಳ
ಊದಿದ ನೀರು ಗುಳ್ಳೆ
ಕೆಂದ ಎಳನೀರು

ಅಂಚಿಕಡ್ಡಿಯ
ಮುರಿದು ಕೊಟ್ಟರೂ
ಅದರಲ್ಲೇ ಖುಷಿ ಪಡುವ
ನಗುವ ಧರಿಸಿರುವವಳೇ
ನನಗೆ ನೀನೇ ಮಗು !




ನಂಬಿಕೆ

ನಮಗೆ
 ಎಲ್ಲಿಯವರೆವಿಗೂ ......
ಎಲ್ಲರ ಮೇಲೆ
ನಂಬಿಕೆ ಬರುವುದಿಲ್ಲವೋ

ಅಥವಾ

ಎಲ್ಲರಮೇಲೆ
ನಂಬಿಕೆ ಹೋಗುವುದಿಲ್ಲವೋ
ಅಲ್ಲಿಯವರೆಗೆ .......

ನಮ್ಮ ಮೇಲೆ ನಮಗೇ
ನಂಬಿಕೆ ಬರುವುದಿಲ್ಲ !

Thursday, 1 March 2018

ಹಸಿದವನ ಕೊಲೆ

ಹಸಿವೆಯನ್ನು ಕೊಲ್ಲಲಾಗದ ಸಮಾಜ
ಹಸಿದವನನ್ನು ಕೊಲ್ಲುತ್ತದೆ ! 
ಸತ್ತವನನ್ನು ದೇವರು ಮಾಡಿ 
ಬದುಕಿದವನು ಕೇವಲನಾಗುತ್ತಾನೆ !

ಕೂಪಮಂಡೂಕ

ಕಾರವಾರದ ಕೂಪಮಂಡೂಕನಿಗೆ 
ಭಾರತದ ಇತಿಹಾಸವೆಲ್ಲಾ ಕರತಲಾಮಲಕ 
ಅವನ ಯೋಗ್ಯತೆಗೆ ನಾಡಿನ ಭಾಷೆಯ
ಬೇರು ಮತ್ತು ಎಳೆಗಳು ಮಾತ್ರ ನಿಲುಕವು !

Anathkumar Hedge # 

ಋಣ

ಸಾಲ ಮಾಡಿದವರು
ಓಡಿ ಹೋಗುತ್ತಾರೆ ....
ತಪ್ಪು ಮಾಡಿದವರು
ಖುಲಾಸೆಯಾಗುತ್ತಾರೆ ....
ಅಡ್ಡಿಯಿಲ್ಲ
ಆದರೆ
ನಮ್ಮ ಮಧ್ಯೆ ಇದ್ದುಕೊಂಡು
ನಮಗಾಗಿ ಹೋರಾಡಿದ
ಕೆ ಸ್ ಪುಟ್ಟಣಯ್ಯ ನಂತವರು
ಇಷ್ಟು ಬೇಗ ಋಣ ಹೊರಿಸಿ
ಹೊರಟು ಬಿಡುವುದು
ಏಕೆ ???
# RIP ...K S Puttanaiah #

ಧರ್ಮ ದರ್ಶನ

ಎಲ್ಲರೂ ಕಾಸು ಕೊಟ್ಟು
ಹೋದರು ವಿಶೇಷ ದರ್ಶನಕ್ಕೆ
ನಾನೂ ಅವರ ಹಿಂಬಾಲಿಸಿದೆ ...
ಜನ ಮರುಳೋ 
ಜಾತ್ರೆ ಮರುಳೋ
ಗೊತ್ತಿಲ್ಲ !
ಧರ್ಮ ದರ್ಶನದ ಹಾದಿ ಸುಗಮವಾಗಿತ್ತು
ಕಾಸು ಕೊಟ್ಟವರ ಪಾಡು ನೋಡಬೇಕಿತ್ತು
ನಾನು ಕೊಟ್ಟ ದುಡ್ಡಿಗೆ ಅಷ್ಟು ರಂಜನೆ ಸಾಕಾಯ್ತು !

ಯಾರು ಹೆಚ್ಚು ?

ಯಾರು ಹೆಚ್ಚು ? ಯಾರು ಕಡಿಮೆ ? 
ಕಡೆಗೆ ಉಳಿವುದೊಂದೆ - ಒಲುಮೆ 
ಕೊಟ್ಟು ಕೊಟ್ಟು ಹಗುರವಾಗು 
ಪಡೆದು ಪಡೆದು ಧನ್ಯನಾಗು !

ಉರಿವ ಧರೆ

ನೀರ ಎರಚಿ
ಉರಿವ ಧರೆಯ ತಣಿಸಬಹುದೇ ?
ಮಣ್ಣ ತೂರಿ
ಜಗದ ಕಣ್ಣ ಮುಚ್ಚಬಹುದೇ ?
ನೆತ್ತರಲಿ ಬರೆದ ಪದ್ಯ
ಹಾಡಾಗಬಹುದೇ ?
ಓರೆ ಕೋರೆಗಳಿಗೆ ನಕ್ಕಿದ್ದು
ಮಂದಹಾಸವಾಗುವುದೇ  ?
ತನ್ನ ತಾನರಿದುಕೊಂಡು
ಹಗುರವಾಗಬಹುದೇ ?

Sunday, 7 January 2018

ಪ್ರಶ್ನೆಗಳಿರುವುದು ನನಗೆ 

ಕೊಲ್ಲುವವನ ಬಂಧಿಸಿ  
ಜೈಲಿಗೋ ಕೋರ್ಟಿಗೋ ಅಟ್ಟಿಬಿಡಬಹುದು 
ಆ ಮನಸ್ಥಿತಿಯ ಹೇಗೆ ಕೊಲ್ಲುವುದು ?

ತರ್ಕ ಬಲ್ಲವನೊಡನೆ 
ಸೋಲೋ ಗೆಲುವೋ ಏನೋ ಒಂದು 
ಕುತರ್ಕಿಗಳೊಡನೆ ಹೇಗೆ ಏಗುವುದು ?

ಕಣ್ಣುಕಾಣದವಗೆ ಆಸರೆಯಾಗಬಹುದು 
ಕಂಡರೂ ಕಾಣದಂತೆ ನಟಿಸುವವಗೆ 
ಯಾವ ಬಿರುದ ಕೊಡುವುದು ?

ಗಾಡಿಯ ಎತ್ತೊಂಡೆದಕ್ಕೆ 
ಮತ್ತೊಂದ್ ಬಲಕ್ಕೆ ಎಳೆದಾಡಿದರೆ 
ದೂರದಾರಿಯ ಹೇಗೆ ಸಾಗುವುದು !
ಪೇಟೆಯ ಹೇಗೆ ಮುಟ್ಟುವುದು ?