ಗುಬ್ಬಿಗಳ ಒಕ್ಕಲೆಬ್ಬಿಸಿದರು
ಮರಗಳ ಕಡಿದು
ಅವು ಎಲ್ಲಿ ಹೋದವೋ
ಬದುಕ ಹುಡುಕಿ ?
ತಿಳಿ ನೀರಿಗೆ ಕೊಳಚೆಯ
ಬೆರೆಸಿ , ಕುಡಿವರು
ಅದನೇ ಮಗ್ಗಲಿನಿಂದ
ಬೋರುಗಳನಿಳಿಸಿ !
ಬದುಕುತಿಹರು
ತಾವೇ ನಿರ್ಮಿಸಿದ
ಹೊಗೆಯ ಜಗದೊಳು
ಕಂಡರೂ ಕಾಣದಂತೆ
ಮೀಸೆ ಮಣ್ಣಾಗದಂತೆ
ರಸ್ತೆಯಗಲಿಸಲಿಕ್ಕೆ
ಮರಕಡಿವವರು
ಕಟ್ಟಿಗೆಗೆ ಪುಳ್ಳೆ ಆಯುವವನ
ಕುಂಡೆಗೆ ಹೂಡೆವರು
ಇದಾವ ಸೀಮೆಯ ನ್ಯಾಯ ?
ಕೇಳಿ ತಮಾಷೆ
ಕಾಡತಬ್ಬಿದವರ
ಎಳೆದು ತರುತ್ತಾರಂತೆ
ಹೊಸ ಜಮೀನು
ಮನೆ ಕೊಡಿಸುತ್ತಾರಂತೆ
ಎಂಥ ಹತಾಷೆ !
ನಗುವಿಗೂ ನೆರಳಿಗೂ
ಬೆಲೆಕಟ್ಟುವವರು ಇವರು
ಇವರ ಜ್ಞಾನಕ್ಕೆ ತರ್ಕಕ್ಕೆ ತೆವಲಿಗೆ
ಬಲಿಯಾಗುತಿಹರು
" ಕಾಡ ಮಕ್ಕಳು "
No comments:
Post a Comment