ಬರಡಾಗಿದ್ದ ಭೂಮೀಲಿ
ಸಸಿಗಳ ನೆಟ್ಟ
ನೀರ ತಂದು ಹಾಯಿಸಿ
ಮರಗಳ ಕನಸ ಕಂಡ !
ನಕ್ಕರು ಹಲವರು
ತಿಕ್ಕಲೆಂದರು ಕೆಲವರು
ಇಲ್ಲದ ನೀರ
ತಂದು ಹಾಯಿಸಿ
ಮನೆಹಾಳು
ಮಾಡುತ್ತಿರುವನೆಂದರು
ಬಹಳರು !
ಆದರೂ ಅವನು
ಮರಗಳ ಕನಸ ಬಿಡಲಿಲ್ಲ .
ವರ್ಷಗಳು ಉರುಳಲು
ಮರಗಳು ಕಾಡಾದವು
ಬರಡು ಭೂಮಿಯಲ್ಲಿ
ನೀರು ನಿಂತಿತು
ಹಕ್ಕಿಗಳು ಬಂದವು
ಭಾವಿ ತುಂಬಿದವು
ಗಾಳಿ ತಂಪಾಯ್ತು....
ಈಗ ಜನ ಹಾಯಾಗಿದ್ದಾರೆ
ಎಲ್ಲವನು ಊರ ದೇವರಿಗೆ
ಆರೋಪಿಸಿ , ದೇವಳದ ಮೇಲೆ
ಗೋಪುರವ ಕಟ್ಟಿಸಿ !
ಸಸಿ ನೆಟ್ಟವನು ಈಗ
ಮುದುಕನಾಗಿದ್ದಾನೆ
ಬೆಟ್ಟದ ತಡಿಯ
ಗುಡಿಸಲಲ್ಲಿ ಸದಾ
ಮಲಗಿರುತ್ತಾನೆ !
ನಿದ್ದೆಯಲ್ಲೂ ಮರಳುಗಾಡ
ಕನವರಿಸುತ್ತಿರುತ್ತಾನೆ !
No comments:
Post a Comment